ವಾಲ್ಮೀಕಿ_ಜಯಂತಿ

ವಾಲ್ಮೀಕಿ ಋಷಿಯಾಗುವ ಮೊದಲು ತನ್ನ ಪೂರ್ವಾಶ್ರಮದಲ್ಲಿ ರತ್ನಾಕರನೆಂಬ ನಾಮಾಂಕಿತ ಬೇಡನಾಗಿದ್ದ ಮತ್ತು ಕಾಡಿನ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರನ್ನು ದೋಚಿ ಜೀವನ ನಡೆಸುತ್ತಿದ್ದನು. ಒಮ್ಮೆ ನಾರದ ಋಷಿಯು ರತ್ನಾಕರನಿಗೆ ಎದುರಾದಾಗ, ಅವನು ನಾರದನನ್ನು ದರೋಡೆ ಮಾಡಲು ಯತ್ನಿಸಿದನು. ಆಗ ನಾರದನ ಉಪದೇಶದಿಂದ ರತ್ನಾಕರನಿಗೆ ಜ್ಞಾನೋದಯವಾಗಿ ಮುಂದೆ ಸಂಸ್ಕಾರಿತನಾಗುವನು.
ಪರಮಾತ್ಮನನ್ನು ಕುರಿತು ಬಹಳ ವರ್ಷಗಳ ಕಾಲ ತಪಸ್ಸು ಮಾಡುತ್ತಿದ್ದಾಗ ಅವರ ಸುತ್ತ ಹುತ್ತ ಬೆಳೆದಿತ್ತು. ಹುತ್ತ (ಸಂಸ್ಕೃತದಲ್ಲಿ-ವಲ್ಮೀಕ) ವನ್ನು ಭೇದಿಸಿಕೊಂಡು ಹೊರಗೆ ಬಂದಿದ್ದರಿಂದ ರತ್ನಾಕರ ವಾಲ್ಮೀಕಿ ಯಾಗಿ ಬದಲಾದರೂ.
ಒಬ್ಬ ಅಸಂಸ್ಕೃತ ದರೋಡೆಕೋರ ಕಾಲಾಂತರದ ಘಟ್ಟದಲ್ಲಿ ಸಂಸ್ಕಾರಿತನಾಗಿ, ನಾರದರು ತಮಗೆ ಸಂಗ್ರಹವಾಗಿ ಹೇಳಿದ್ದ ರಾಮನ ಕಥೆಯನ್ನು ವಾಲ್ಮೀಕಿ ಮಹರ್ಷಿಗಳು ೨೪,೦೦೦ ಶ್ಲೋಕಗಳನ್ನೊಳಗೊಂಡ ಮಹಾಗ್ರಂಥವನ್ನು ರಚಿಸಿದರು. ಅದುವೇ ಇವತ್ತಿನ ಮಹಾಕಾವ್ಯ ರಾಮಯಣ.
ದಕ್ಷಿಣ ಭಾರತಕ್ಕೆ ಹೋಲಿಸಿದಾಗ ಉತ್ತರದಲ್ಲಿ ವಾಲ್ಮೀಕಿಯ ಪ್ರಾಭಲ್ಯ ಹೆಚ್ಚಾಗಿಯೇ ಇದೆ. ಇವತ್ತಿಗೂ ಪಾಕಿಸ್ತಾನದಲ್ಲಿ ಇರುವು ಹೆಚ್ಚಿನ ಹಿಂದೂಗಳು ವಾಲ್ಮೀಕಿ ಜನಾಂಗಕ್ಕೆ ಸೇರಿದವರೆ ಹೆಚ್ಚಾಗಿದ್ದಾರೆ. ಅಲ್ಲಿ ಸಿಗುವ ಹಿಂದೂ ಮಂದಿರಗಳಲ್ಲಿ, ಹೆಚ್ಚಿನವು ವಾಲ್ಮೀಕಿಯ ಮಂದಿರಗಳೇ ಇರುತ್ತವೆ.
ಸನಾತನ ಸಂಸ್ಕೃತಿಯಲ್ಲಿ ಎಂತಹ ಮನುಷ್ಯನು ಉತ್ತಮ ಸಂಸ್ಕಾರ ಹೊಂದಲು ಮತ್ತು ಬದಲಾಗುವುದಕ್ಕೆ ಅನಂತ ಅವಕಾಶಗಳಿವೆ. ಅದೆಷ್ಟೋ ಕಾಲಮಾನದ ಹಿಂದೆ ಆಗಿ ಹೋದ ಈ ಮಹಾಪುರುಷ ಇಂದಿಗೂ ಜನ ಮಾನಸದಲ್ಲಿ ಪೂಜ್ಯ ಸ್ಥಾನ ಪಡೆದಿರುವುದು ತನ್ನ ವಿದ್ವತ್, ತಪಸ್ಸು ಮತ್ತು ಮುಖ್ಯವಾಗಿ ಒಬ್ಬ ವ್ಯಕ್ತಿಯಾಗಿ ಆರಂಭ ಕಂಡು ಮುಂದೆ ಒಟ್ಟು ಸಮಾಜದ ಶಕ್ತಿಯಾಗಿ ಬದಲಾದ ಪರಿಯಿಂದ.
ನಮ್ಮ ಸಮಾಜದ ಇಂತಹ ಪ್ರಾತಃ-ಸ್ಮರಣೀಯ ಬಹುಮುಖ್ಯ ವ್ಯಕ್ತಿಯನ್ನು ನೆನೆಯುತ್ತಾ, ಅವರ ಆದರ್ಶಗಳನ್ನು ಸದಾ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ.