ರಾಜ್ಯ ಮಂತ್ರಿಯಾಗಿ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆಯ ಜವಾಬ್ದಾರಿ
ಇಂದು ಬೆಳಗ್ಗೆ ಪ್ರಮಾಣವಚನ ಬೋಧನೆಯ ಮೂಲಕ ಕೇಂದ್ರದ ಮಂತ್ರಿ ಮಂಡಲದಲ್ಲಿ ಸೇರ್ಪಡೆಗೊಂಡು, ಸನ್ಮಾನ್ಯ ನರೇಂದ್ರ ಮೋದಿಜಿ ಯವರ ಸಂಪುಟದ ಸದಸ್ಯನಾಗಿ, ರಾಜ್ಯ ಮಂತ್ರಿಯಾಗಿ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆಯ ಜವಾಬ್ದಾರಿ ವಹಿಸಿಕೊಂಡಿದ್ದೇನೆ.
ಸುಮಾರು ೨ ದಶಕಕ್ಕೂ ಹೆಚ್ಚು ಕಾಲ ನನ್ನ ರಾಜಕಾರಣದ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯನ್ನು ಸಂಸತ್ತಿನಲ್ಲಿ ಪ್ರತಿನಿಧಿಸುವ ಪ್ರಾಥಮಿಕ ಜವಾಬ್ದಾರಿಯನ್ನು ಪಕ್ಷ ನನಗೆ ನೀಡಿ ನನ್ನನ್ನು ಜನಸೇವೆಗೆ ಅಣಿಮಾಡಿತು. ಇಂದು ಪ್ರಧಾನಿ ಮೋದಿಯವರು ಮಂತ್ರಿ ಮಂಡಲದೊಳಗೆ ಬರ ಮಾಡಿಕೊಂಡು ಹೆಚ್ಚಿನ ಪರಿಣಾಮಕಾರಿಯ ಕಾರ್ಯ ನಿರ್ವಹಿಸುವ ಹೊಣೆಗಾರಿಕೆಯನ್ನು ವಹಿಸಿರುತ್ತಾರೆ.
ಈ ಜವಾಬ್ದಾರಿಯನ್ನು ಅತ್ಯಂತ ಶ್ರದ್ಧೆ ಹಾಗು ನಿಷ್ಠೆಯಿಂದ ನಿರ್ವಹಿಸಿ, ನನ್ನ ಎಂದಿನ ಸಮಾಜಮುಖಿ ದೃಷ್ಟಿಕೋನದ ಚಿಂತನೆಗೆ ಅಭಿವೃದ್ಧಿಯನ್ನು ಜೋಡಿಸಿಕೊಂಡು ನಿರ್ದಿಷ್ಟ ಗುರಿಯೊಂದಿಗೆ ಕಾರ್ಯ ನಿರ್ವಹಿಸುವ ಭರವಸೆ ಇದೆ. ಪ್ರಧಾನಿಯವರ ಜನಪರ ಯೋಜನೆಗಳನ್ನು ಸಮಾಜಕ್ಕೆ ಪರಿಣಾಮಮಕಾರಿಯಾಗಿ ತಲುಪಿಸುವ ಪ್ರಯತ್ನ ಯಶಸ್ವಿಯಾಗಿ ಮಾಡಲಿದ್ದೇನೆ.
ಈ ಸಂದರ್ಭ ಖಂಡಿತವಾಗಿಯೂ ಸಂಭ್ರಮಾಚರಣೆ ಎಂದು ತಿಳಿಯುವುದಿಲ್ಲ. ಜವಾಬ್ದಾರಿ ಹಾಗು ಹೊಣೆಗಾರಿಕೆಗೆ ಸೂಕ್ತ ವ್ಯಕ್ತಿಯೆಂದು ಗುರುತಿಸಿ ಇಂದು ಮಂತ್ರಿಮಂಡಲದೊಳಗೆ ಸ್ವಾಗತಿಸಿದ ಪ್ರಧಾನಿ ಮತ್ತು ನಮ್ಮ ಪಕ್ಷದ ಅಧ್ಯಕ್ಷರಾದ ಸನ್ಮಾನ್ಯ ಅಮಿತ್ ಶಾ ರವರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು!
ಈ ಗುರುತಿಸುವಿಕೆಯ ಶ್ರೇಯಸ್ಸು ಮತ್ತು ಕೀರ್ತಿ ನನ್ನನ್ನು ೫ ಬಾರಿ ಸಂಸದನಾಗಿ ಆರಿಸಿದ ನನ್ನ ಉತ್ತರ ಕನ್ನಡ ಜನೆತೆಗೆ ಸಂದ ಬಹು ದೊಡ್ಡ ಗೌರವವೆಂದು ವಿನಮ್ರನಾಗಿ ಹೇಳ ಬಯಸುತ್ತೇನೆ. ಗುರು ಸ್ವರೂಪಿ ನನ್ನ ಪಕ್ಷ ಹಾಗು ಸಮಾಜ ಸಂಸ್ಕಾರ ನೀಡಿದ ಮಾತೃ ಸ್ವರೂಪಿ ಸಂಘ ಪರಿವಾರಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು.
ಮುಂದಿನ ದಿನಗಳಲ್ಲಿ ಕಾರ್ಯ ನಿರ್ವಹಣೆ, ಯೋಜನೆಗಳ ಕಾರ್ಯ ಸ್ವರೂಪ ಮತ್ತು ಜನೋಪಯೋಗಿ ವಿಷಯದ ಬಗ್ಗೆ ಎಂದಿನಂತೆ ನಿಮ್ಮ ಜೊತೆಗೆ ನಿರಂತರ ಸಂಪರ್ಕದಲ್ಲಿ ಇರುತ್ತೇನೆ. ಹೆಚ್ಚಿನ ಸಂಹವನ ಇನ್ನು ಮುಂದೆ ನನ್ನ ಕಾರ್ಯಾಲಯ ವಹಿಸಿಕೊಳ್ಳಲಿದೆ.
ಮತ್ತೊಮ್ಮೆ, ಕ್ಷೇತ್ರದ ಜನತೆಗೆ, ನನ್ನೆಲ್ಲ ಸ್ನೇಹಿತ- ಹಿತೈಷಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು! ಈ ಸಂದರ್ಭದಲ್ಲಿ ನನ್ನನ್ನು ಅಭಿನಂದಿಸಿ ಶುಭಾಶಯ ಕೋರಿದ ಸರ್ವರಿಗೂ ನನ್ನ ಅನಂತ ವಂದನೆಗಳು!