Infinite Thoughts

Thoughts beyond imagination

ಪ್ರಾತಃ ಸ್ಮರಣೀಯ ಮೇರು ವ್ಯಕ್ತಿಗಳು!

ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟು, ಭಾರತದ ಇತಿಹಾಸದಲ್ಲಿ ಅಜರಾಮರರಾದ ಬಾಲ ಗಂಗಾಧರ ತಿಲಕ್ ಹಾಗು ಚಂದ್ರಶೇಖರ್ ಆಜಾದ್ ರವರು ಜನಿಸಿದ ಸುದಿನವಿಂದು.  ಪ್ರಖರ ಭಾರತೀಯ ರಾಷ್ಟ್ರವಾದಿ, ಸಮಾಜ ಸುಧಾರಕ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ಬಾಲಗಂಗಾಧರ ತಿಲಕರು ಬಹುಶಃ ಭಾರತದ ಸ್ವಾತಂತ್ರ್ಯ ಹೋರಾಟ ಚಳುವಳಿಯ ಅಗ್ರಮಾನ್ಯ ಜನಪ್ರಿಯ ನಾಯಕ.  ಭಾರತೀಯರ ಪ್ರಜ್ಞೆಯಲ್ಲಿ ಸಂಪೂರ್ಣ ಸ್ವರಾಜ್ಯದ ಕಿಚ್ಚು ಹಚ್ಚಿದ ತಿಲಕರು ಹಿಂದೂ ರಾಷ್ಟ್ರವಾದದ ಪಿತಾಮಹ ಎಂದೂ ಹೆಸರುವಾಸಿ.  ‘ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು, ಅದನ್ನು ನಾನು ಪಡೆದೇ ತೀರುತ್ತೇನೆ’ ಎಂಬ ಅವರ ಘರ್ಜನೆ ಅಂದು ಜನಪ್ರಿಯವಾದದ್ದಷ್ಟೇ ಅಲ್ಲ, ಇಂದಿಗೂ ಜನ ಸಾಮಾನ್ಯರ ನೆನಪಿನಲ್ಲಿ ಅವರು "ಲೋಕಮಾನ್ಯ"ರಾಗಿಯೇ ವಿರಾಜಮಾನರಾಗಿದ್ದಾರೆ.  

ತಿಲಕರು ಧಾರ್ಮಿಕ ಹಬ್ಬವಾದ ಗಣೇಶ ಚತುರ್ಥಿಯನ್ನು ಹಾಗು ಚರಿತ್ರ ಪುರುಷನಾದ ಶಿವಾಜಿ ಮಹಾರಾಜರ ಜಯಂತಿಯನ್ನು, ಸಾರ್ವಜನಿಕರೆಲ್ಲರೂ ಒಗ್ಗೂಡಿ ಆಚರಿಸುವಂತಹ ಒಂದು ಉತ್ಸವವನ್ನಾಗಿಸಿದರು.  ಭಾರತೀಯರಲ್ಲಿ ಧಾರ್ಮಿಕ ಸಾಮರಸ್ಯ ಮೂಡಿಸಿ, ಅವರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಅಣಿಗೊಳಿಸಿದ ಏಕಮೇವ ಜನನಾಯಕ.  ಭಾರತೀಯ ಸಂಸ್ಕೃತಿ, ಇತಿಹಾಸ ಹಾಗೂ ಧರ್ಮದ ಬಗ್ಗೆ ಸ್ವರಾಜ್ ಮೂಲಕ ಹಲವು ಲೇಖನಗಳಿಂದ  ಅಂದಿನ ಲಕ್ಷಾಂತರ ಭಾರತೀಯರಿಗೆ ತಮ್ಮ ಭವ್ಯ ಪರಂಪರೆಯ ಅರಿವು ಮಾಡಿಕೊಟ್ಟು, ಜನ ಮಾನಸದಲ್ಲಿ ತಮ್ಮ ನಾಡಿನ ಬಗ್ಗೆ ಹೆಮ್ಮೆಯ ಅಭಿಮಾನವನ್ನು ಮೂಡಿಸಿದ ಪ್ರಾತಃ ಸ್ಮರಣೀಯರು .

ಹಾಗೆಯೇ 'ಆಜಾದ್' ಎಂಬ ಹೆಸರು ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಜರಾಮರ.  ಚಂದ್ರಶೇಖರ ಸೀತಾರಾಮ್ ತಿವಾರಿ (ಆಜಾದ್) ಅವರು  ಬ್ರಿಟಿಷರನ್ನು ಶಸ್ತ್ರಾಸ್ತ್ರಗಳ ಮೂಲಕವೇ ಎದುರಿಸಬೇಕೆಂದು ಧೃಡ ಸಂಕಲ್ಪ ಮಾಡಿದ ಮಹಾನ್ ದೇಶಭಕ್ತ.  ಇಂದಿನ ಉತ್ತರಪ್ರದೇಶದ ಪಂಡಿತರ ಮನೆಯಲ್ಲಿ ಹುಟ್ಟಿದರೂ ಕ್ಷತ್ರಿಯ ಪರಂಪರೆಯಂತೆ ಕೈಯಲ್ಲಿ ಬಂದೂಕು ಹಿಡಿದು ಹೋರಾಟಕ್ಕೆ ಧುಮುಕಿದ ಕ್ರಾಂತಿಕಾರಿ  ಸೇನಾನಿ.  ೧೮೫೭ರ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ನಂತರ ಬ್ರಿಟಿಷ್‌‌ ಆಡಳಿತದ ವಿರುದ್ಧದ ತಮ್ಮ ಸ್ವಾತಂತ್ರ್ಯಕ್ಕಾಗಿ ಅಂದಿನ ಹೋರಾಟದಲ್ಲಿ ಶಸ್ತ್ರ-ಆಯುಧಗಳನ್ನು ಬಳಸಿದ ಭಾರತೀಯ ಕ್ರಾಂತಿಕಾರಿಗಳಲ್ಲಿ ಆಜಾದ್ ರೇ ಮೊದಲಿಗರು. 

ಆಜಾದ್ ಒಬ್ಬ ವೀರ ಯೋಧ, ಪರಾಕ್ರಮಿ, ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ಅಂದು  ಆಲ್ ಫ್ರೆಡ್ ಉದ್ಯಾನವನದಲ್ಲಿ ಅಂತಿಮ ಕ್ಷಣ ಎದುರಿಸುವಾಗಲೂ ಅಜಾದ್ ಶರಣಾಗಲಿಲ್ಲ.  ಸಂಪೂರ್ಣವಾಗಿ ಸುತ್ತುವರೆಯಲ್ಪಟ್ಟ ಪೋಲೀಸರ ಸಂಖ್ಯಾಬಲವು ಹೆಚ್ಚುತ್ತಿದ್ದಂತೆ, ಆಜಾದ್ ಅವರು ತಮ್ಮ ಬಳಿ ಇದ್ದ ಪಿಸ್ತೂಲ್ ನಿಂದ ಒಂದೇ ಒಂದು ಗುಂಡು ಉಳಿದಾಗ, ತಮ್ಮ ಮೇಲೆಯೇ ಗುಂಡು ಹಾರಿಸಿಕೊಂಡು ತಮ್ಮನ್ನು ಜೀವಂತವಾಗಿ ಯಾರೂ ಸೆರೆಹಿಡಿಯಲಾರರೆಂಬ ತಮ್ಮ ಪ್ರತಿಜ್ಞೆಯನ್ನು ಕಾಪಾಡಿಕೊಂಡರು.

ಬಾಲ ಗಂಗಾಧರ ತಿಲಕ್  ಹಾಗು ಚಂದ್ರಶೇಖರ್ ಆಜಾದ್ ರವರು ಭಾರತದ ಸ್ವಾತಂತ್ರ್ಯಕ್ಕೆ ನೀಡಿದ ಕೊಡುಗೆ ಹಾಗು ಮಾಡಿದ ಸೇವೆಗೆ ಭಾರತೀಯರೆಲ್ಲರೂ ಸದಾ ಚಿರಋಣಿ.  ಇಂದು ಇಂತಹ ಪುಣ್ಯಪುರುಷರ ಜನ್ಮದಿನದಂದು ಅವರನ್ನು ಸ್ಮರಿಸುತ್ತಾ, ನನ್ನ ಅನಂತ ನಮನಗಳನ್ನು ಸಲ್ಲಿಸುತ್ತೇನೆ. 
 
#ಅನಂತಕುಮಾರಹೆಗಡೆ

Related posts