ರಾಷ್ಟ್ರೀಯ ಕಿಸಾನ್ ದಿವಸ್

"ರಾಷ್ಟ್ರೀಯ ಕಿಸಾನ್ ದಿವಸ್" ದೇಶದ ರೈತರಿಗೆಂದೇ ಮುಡಿಪಾಗಿಟ್ಟ ವಿಶೇಷ ದಿನ
ಜಗತ್ತಿನ ಅತ್ಯಂತ ಪುರಾತನ ಉದ್ಯೋಗ ಯಾವುದು..? ಎಂಬ ಪ್ರಶ್ನೆಏನಾದ್ರೂ ನಿಮ್ಮ ಮನಸ್ಸಿನಲ್ಲಿ ಮೂಡಿದರೆ ಅದಕ್ಕೆ ಉತ್ತರ ಕೃಷಿಯೇ... ಮನುಷ್ಯ ಯಾವಾಗ ಕೃಷಿ ಮಾಡುವುದನ್ನು ಕಲಿತನೋ ಅಲ್ಲಿಂದಲೇ ಆಹಾರ ಅರಸಿ ಹೋಗುವ ಆತನ ಅಲೆಮಾರಿ ಬದುಕು ನಿಂತು ಹೋಯಿತು. ಕೃಷಿಯಿಂದ ಬೇಕಾದಷ್ಟು ಆಹಾರ ಒಂದೇ ಕಡೆ ಸಿಗುತ್ತದೆ ಎಂಬುದು ಎಂದು ಮನದಟ್ಟಾಯಿತೋ ಅವತ್ತೇ ಆತ ಕೃಷಿ ಭೂಮಿಯಿದ್ದಲ್ಲೇ ನೆಲೆನಿಂತ... ವಾಸಕ್ಕಾಗಿ ಅಲ್ಲೇ ಒಂದು ಆಶ್ರಯ ನಿರ್ಮಿಸಿಕೊಂಡ.... ಹಲವಾರು ಜನರು ಒಟ್ಟಾಗಿ ಕೃಷಿ ಮಾಡಿ ಗುಂಪಾಗಿ ವಾಸ ಮಾಡಲು ತೊಡಗಿದಾಗಲೇ ಹಳ್ಳಿಗಳ ನಿರ್ಮಾಣ ಆಯಿತು. ಹೀಗೆ ನಾಗರೀಕತೆ ಎಂಬುದು ಹುಟ್ಟಿದ್ದೇ ಕೃಷಿಯಿಂದ. ಜಗತ್ತಿನ ಅಷ್ಟೂ ಅಭಿವೃದ್ಧಿಗಳಿಗೆ, ಬೆಳವಣಿಗೆಗಳಿಗೆ, ಆಧುನೀಕರಣಗಳಿಗೆ ಮೂಲ ಕಾರಣ ಕೃಷಿಯೇ... ಅದೆಲ್ಲದರ ಮೂಲಬಿಂದು ಆಗಿರುವುದು ರೈತನೇ...!
ಆದರೆ ದುರದೃಷ್ಟವಶಾತ್ ಈ ಎಲ್ಲಾ ಆಧುನೀಕರಣಗಳ ಹುಚ್ಚು ಓಟದಲ್ಲಿ ಬಹುಪಾಲು ಜನ ಇದೆಲ್ಲದರ ಮೂಲವನ್ನೇ ಮರೆಯುತ್ತಿದ್ದಾರೆ ... ಕೃಷಿಯನ್ನು ಮರೆಯುತ್ತಿದ್ದಾರೆ...ರೈತನಾಗುವುದಂತೂ ಬೇಡವೆ ಬೇಡವಾಗಿದೆ... ಇವತ್ತು ನಗರದಲ್ಲಿ ವಾಸಿಸುವ ಬಹುತೇಕರಿಗೆ ತಾವು ತಿನ್ನುವ ಆಹಾರ ಎಲ್ಲಿಂದ ಬರುತ್ತದೆ ಎಂಬ ಚಿಂತೆಯೇ ಇದ್ದಂತಿಲ್ಲ.. ಅದನ್ನು ಬೆಳೆಯುವವರ ಬಗ್ಗೆ ಅರಿವೂ ಇಲ್ಲ, ಅವರ ಬದುಕಿನ ಬಗ್ಗೆ ಕಾಳಜಿಯೂ ಬೇಕಾಗಿಲ್ಲ.
ಕದಂಬ ಸಂಸ್ಥೆ ಹುಟ್ಟಿಕೊಂಡದ್ದೇ ಇಂಥದ್ದೊಂದು ಚಿಂತನೆಯ ಸೆಲೆಯಿಂದ. ಸ್ವಯಂ ಸೇವಾ ಸಂಸ್ಥೆಯೊಂದನ್ನು ಸ್ಥಾಪಿಸಬೇಕು, ಅಧಿಕಾರ- ಸರಕಾರ ಇದೆಲ್ಲದರ ಪರಿಧಿಯಿಂದಾಚೆ ನಿಂತು ಸರ್ಕಾರೇತರ ನೆಲೆಗಟ್ಟಿನಲ್ಲಿ ಸಮಾಜಸೇವೆಯಲ್ಲಿ ತೊಡಗಿಕೊಳ್ಳಬೇಕು, ಮತ್ತು ಇದಕ್ಕೋಸ್ಕರ ನಮ್ಮದೇ ಆದ ಒಂದು ಸಂಸ್ಥೆ ಬೇಕು ಅಂತ ಅಂದುಕೊಂಡು ರೂಪುರೇಷೆಗಳನ್ನು ಸಿದ್ಧಪಡಿಸುವ ಹೊತ್ತಿಗಾಗಲೇ ಒಂದಂತೂ ನಿರ್ಧಾರ ಆಗಿ ಹೋಗಿತ್ತು. ನಮ್ಮ ಸ್ವಯಂ ಸೇವಾ ಸಂಸ್ಥೆ ಸಂಪೂರ್ಣವಾಗಿ ರೈತ ಕೇಂದ್ರಿತವಾಗಿರಬೇಕು... ನಾವೇನೇ ಸೇವಾ ಚಟುವಟಿಕೆಗಳನ್ನು ಮಾಡಿದರೂ ಅದರಲ್ಲೊಂದು ಪಾಲು ರೈತನಿಗಿರಲೇಬೇಕು ಎಂಬುದೇ ಆ ನಿರ್ಧಾರ. ಕದಂಬ ಶುರುವಾದಾಗಿನಿಂದಲೂ ಈ ಮೂಲಮಂತ್ರಕ್ಕೆ ಬದ್ಧವಾಗಿಯೇ ನಡೆದುಕೊಂಡು ಬಂದಿದೆ. ಈಗ ಮಹಿಳಾ ರೈತರಿಗೆಂದೇ "ಭೂಮಿ ಪುತ್ರಿ" ಎಂಬ ವೇದಿಕೆಯನ್ನು ಸೃಷ್ಟಿಸಿ ಆ ಮೂಲಕ ಪಾರಂಪರಿಕ ಕೃಷಿ ಜ್ಞಾನದ ಜೊತೆಗೆ ಅತ್ಯಾಧುನಿಕ ವೈಜ್ಞಾನಿಕ ತಂತ್ರಜ್ಞಾನಗಳನ್ನು ಮಿಳಿತಗೊಳಿಸಿ ರೈತ ಮಹಿಳೆಯರನ್ನು ಕೃಷಿ ಉದ್ಯಮಿಗಳನ್ನಾಗಿ ರೂಪಿಸುವ ನಿಟ್ಟಿನಲ್ಲಿ ದೊಡ್ಡ ಮಟ್ಟದ ಪ್ರಯತ್ನ ಶುರುವಾಗಿದೆ.
ಕದಂಬ ಸಂಸ್ಥೆಯಿಂದ ರೈತರಿಗೆಂದೇ ಹಲವಾರು ಕಾರ್ಯಕ್ರಮಗಳನ್ನು ಮಾಡಿಯಾಗಿದೆ... ಅಗರವೂಡ್, ಚಿಯಾ,ಗಮ್ಲ್ಯಾಕ್, ನಂತಹ ಹೊಸ ಬೆಳೆಗಳನ್ನು ಪರಿಚಯಿಸಿದ್ದೇವೆ. ಉತ್ತರ ಕನ್ನಡ ಜಿಲ್ಲೆಯಲ್ಲಂತೂ ಕೋಕೋ , ವೆನಿಲ್ಲಾ, ಗೇರು ಇನ್ನೂ ಅನೇಕ ಅಸಾಂಪ್ರದಾಯಿಕ ಬೆಳೆಗಳಿಗೆ ಹೆಚ್ಚಿನ ಪ್ರೋತ್ಸಹ ನೀಡಲಾಗಿದೆ. ಪ್ಲಮ್ರೋಸ,ಲೆಮನ್ ಗ್ರಾಸ್, ಸಿಟ್ರೋನೆಲ್ಲಾ , ಮುಂತಾದ ಸುಗಂಧ ಸಸ್ಯಗಳ ಬೇಸಾಯ ಈಗಾಗಲೇ ರೈತರಿಗೆ ಅತ್ಯಂತ ಪ್ರಿಯವಾಗಿದೆ.
ಈಗ ಈ ಸಾಲಿನ ಗ್ರೇಟ್ ಇಂಡಿಯನ್ ಟೆಫ್ ಎಂಬ ಹೊಸ ಆಹಾರ ಧ್ಯಾನದ ಸೇರ್ಪಡೆಯಾಗುತ್ತಿದೆ. ಮಾನವ ಜನಾಂಗಕ್ಕೆ ಕಳೆದ ಸಾವಿರಾರು ವರ್ಷಗಳಿಂದಲೂ ಗೊತ್ತಿರುವ ಈ ಟೆಫ್ ಎಂಬ ಅತ್ಯಂತ ಪೌಷ್ಟಿಕ ಧಾನ್ಯವಾಗಿದೆ, ನಮ್ಮ ದೇಶದಲ್ಲಿ ಕಬ್ಬಿಣ ಅಂಶದ ಕೊರತೆಯಿಂದ ನರಳುತ್ತಿರುವ ಎಲ್ಲರಿಗೂ ಇದರಿಂದ ಪರಿಹಾರವಿದೆ.
ಈ ಬೆಳೆಯನ್ನು ಕದಂಬ ಸಂಸ್ಥೆ ರೈತರ ಮುಖಾಂತರ ತಾನೇ ಬೆಳೆಸಿ ಮಾರುಕಟ್ಟೆಯನ್ನೂ ಸಿದ್ಧಗೊಳಿಸುತ್ತಿದೆ.
#ಅನಂತಕುಮಾರಹೆಗಡೆ